ಸಂಸ್ಕಾರಯುತ ಯುವ ಪೀಳಿಗೆ ನಿರ್ಮಾಣದ ಕಾರ್ಯ ಶಿಕ್ಷಣ ಸಂಸ್ಥೆ, ಶಿಕ್ಷಕರು, ಹೆತ್ತವರು ಸಮನ್ವಯಗೊಂಡರೆ ಮಾತ್ರ ಸಾಧ್ಯ. ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯೇ ಪ್ರಮುಖ ಹಾಗೂ ಅಂತಿಮ ಧೇಯ್ಯವಾಗಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಯುತ ಸೋಮಶೇಖರ ಶೆಟ್ಟಿ ಬಿ. ಹೇಳಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರಿಗೆ ನಡೆದ ‘ಶೈಕ್ಷಣಿಕ ಮಾಹಿತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದು, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುನಿಲ್ ಪಂಡಿತ್ ಅವರು ಮಾತಾಡಿ ಪ್ರಾರಂಭದಲ್ಲೇ ಕಲಿಕೆಯಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆ ಪರಿಣಾಮಕಾರಿಯಾಗಿದ್ದರೆ ಕಲಿಕಾ ಪ್ರಕ್ರಿಯೆ ಸಮಸ್ಯೆ ಅನಿಸದು, ನಿರಂತರ ಶ್ರಮ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಿಕೆಗಳ ಬಗ್ಗೆ ರಾಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಚೈತ್ರ ಪ್ರಭು ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ಸಿಇಟಿ, ನೀಟ್ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಭೌತಶಾಸ್ತ್ರದ ಉಪನ್ಯಾಸಕ ವಿಕ್ರಂ.ಪಿ ಮುಂಬರುವ ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಅವಕಾಶ ಹಾಗೂ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು. ಜೀವಶಾಸ್ತ್ರದ ಉಪನ್ಯಾಸಕಿ ವಾಣಿ ಎಂ. ಎ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕರಾದ ಮಹೇಶ್ ಎಸ್.ಎಸ್ ನಿರೂಪಿಸಿ, ವಂದಿಸಿದರು.

