ಭೂಮಿ ತಾಯಿ ನಮ್ಮೆಲ್ಲರ ಹಸಿವನ್ನು ತಣಿಸೋ ಕರುಣಾಮಯಿ ಮಳೆಗೆ ಭೂಮಿ ತಣಿದು ಹಸನುಗೊಂಡು ನಾಟಿಗೆ ಸಜ್ಜಾಗಿದೆ. ಹೊಸ ಯಾಂತ್ರಿಕ ವಿಧಾನಗಳು ಇಂದು ಭತ್ತ ಕೃಷಿಯಲ್ಲಿ ವೇಗದ ನಾಟಿಗೆ ಸಾಧ್ಯಮಾಡಿಕೊಟ್ಟಿದೆ, ಕಷ್ಟಪಟ್ಟು ಬೆಳೆಸೋ ಅನ್ನವನ್ನು ಹಾಳು ಪೋಲು ಮಾಡದೇ ಒಂದೊಂದು ಅಗುಳನ್ನು ದೇವರೆಂದು ಬಗೆಯೋಣ. ಭೂಮಿಯ ಎಲ್ಲಾ ಜೀವಿಗೂ ಅನ್ನ ಆಹಾರ ಸಿಗುವಂತಾಗಲಿ. ಇಂದು ಕೃಷಿ ಉದ್ಯೋಗದ ಮೂಲವು ಆಗಿದ್ದು,ಕೃಷಿಯ ಮೂಲಕ ಸೃಷ್ಟಿಯಾಗೋ ಉದ್ಯೋಗಗಳ ಮಾಹಿತಿ ಇಂದಿನ ಮಕ್ಕಳಿಗೆ ದೊರಕುವಂತಾಗಬೇಕೆಂದು ನೀರಚಿಲುಮೆಯ ‘ನಿನಾದ’ದ ಕೀರ್ತಿಶೇಷ ಯಶೋವರ್ಮರ ಧರ್ಮಪತ್ನಿ ಸೋನಿಯಾವರ್ಮಾ ಹೇಳಿದರು. ಕಾಲೇಜಿನ ‘ಇಕೋ ಕ್ಲಬ್’ ವತಿಯಿಂದ ವಿದ್ಯಾರ್ಥಿಗಳಿಗೆ ಯಾಂತ್ರೀಕೃತ ಭತ್ತದ ನಾಟಿಯ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸುಮಾರು 28 ದಿನಗಳ ಹಿಂದೆ ಭತ್ತವನ್ನು ಬಿತ್ತನೆ ಮಾಡಿ ಬಂದಿದ್ದು ಸಸಿ ರೂಪ ಪಡೆದ ಭತ್ತವನ್ನು ಗದ್ದೆಯಲ್ಲಿ ಯಂತ್ರದ ಮೂಲಕ ನಾಟಿ ಮಾಡುವ ವಿಧಾನವನ್ನು ತೋರಿಸಿಕೊಡಲಾಯಿತು. ಕಾಲೇಜಿನ ‘ಇಕೋ ಕ್ಲಬ್ ‘ಪರಿಸರ ಸಂಬಂಧಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮ ವೃದ್ಧಿಸುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಇಕೋ ಕ್ಲಬ್ ನ ಸಂಯೋಜಕಿ ವಾಣಿ ಎಂ.ಎ ಜೀವಶಾಸ್ತ್ರ ಉಪನ್ಯಾಸಕ ಪ್ರದೀಪ್,ಗಣಿತ ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮೀ ಉಪಸ್ಥಿತರಿದ್ದರು.

